Oct 23, 2015

ಶಾರದಾ ಪೂಜೆ


ವರ್ಷಂಪ್ರತಿ ಆಚರಿಸುವಂತೆ ನಮ್ಮ ವಿದ್ಯಾಪೀಠದಲ್ಲಿ ಇಂದು ಶ್ರೀ ಶಾರದಾ ಪೂಜೆ ಮತ್ತು ವಿದ್ಯಾರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಕೋಣಮ್ಮೆ ಶ್ರೀ ಮಹಾದೇವ ಭಟ್ಟರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆದವು. ಶಾಲಾ ಸಮಿತಿಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಮತ್ತು ಇತರರು ಉಪಸ್ಥಿತರಿದ್ದರು.

Oct 16, 2015

ಪ್ರತಿಭಾ ಭಾರತೀ - ಅಕ್ಟೋಬರ್


“ನಾವು ಭಾಷಾಪ್ರೇಮಿಗಳಾಗಿರಬೇಕು, ಯಾವುದೇ ಭಾಷೆಯನ್ನು ದ್ವೇಷಿಸಬಾರದು. ನಮ್ಮ ಪ್ರತಿಭೆಯನ್ನು ಉದ್ದೀಪನಗೊಳಿಸುವ ಮೂಲಕ ನಾವು ಭಾಷೆಗಳ ನಡುವೆ ಸಮನ್ವಯತೆಯನ್ನು ಸಾಧಿಸಬೇಕು. ಈ ನಿಟ್ಟಿನಲ್ಲಿ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ದೊರೆಯುವಂತಾಗಬೇಕು.” ಎಂದು ಹವ್ಯಾಸಿ ಭಾಗವತ ಕಂಬಾರು ಕೇಶವ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 16.10.2015 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಅಕ್ಟೋಬರ್ ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಕಿಶೋರಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಗ್ರಾಮೋತ್ಥಾನ ಟ್ರಸ್ಟಿನ ಸ್ಥಳೀಯ ಅಧಿಕಾರಿ ಚಂದ್ರಶೇಖರ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ದೀಕ್ಷಾ.ಎಸ್ ವಂದಿಸಿದರು. ಅನನ್ಯ ಮತ್ತು ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

Oct 2, 2015

ಸ್ವಚ್ಛ ಭಾರತ ಅಭಿಯಾನ




ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ಶಾಲಾ ಪರಿಸರದ ಶುಚೀಕರಣ ಕಾರ್ಯಕ್ರಮವು ಇಂದು ಜರಗಿತು. ಗ್ರಾಮೋತ್ಥಾನ ಸಮಿತಿಯ ಚಂದ್ರಶೇಖರ, ಮುನ್ನಿಪ್ಪಾಡಿ ಶಂಕರನಾರಾಯಣ ರಾವ್, ಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು ಮತ್ತು ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.

Sep 8, 2015

ಶ್ರೀಕೃಷ್ಣ ಜಯಂತಿ ಉತ್ಸವ 2015



“ಯಾವುದು ಮಹಾಭಾರತದಲ್ಲಿ ಇಲ್ಲವೋ ಅದು ನಮ್ಮ ಭರತ ಭೂಮಿಯಲ್ಲಿ ಇಲ್ಲ. ಯಾವುದು ಕೃಷ್ಣನಲ್ಲಿ ಇಲ್ಲವೋ ಅದು ನಮ್ಮಲ್ಲಿಲ್ಲ. ಕೃಷ್ಣ ನಿರಾಯುಧನಾಗಿ ಯುದ್ಧ ಭೂಮಿಯಲ್ಲಿ ನಿಂತ, ಭಗವದ್ಗೀತೆಯನ್ನು ಬೋಧಿಸಿದ. ಗೀತೆ ಜೀವನದ ಕನ್ನಡಿ. ನಮಗೆ ಏನು ಬೇಕೋ ಅದಕ್ಕೆ ಉತ್ತರ ಗೀತೆಯಲ್ಲಿದೆ. ಭಾರತದ ಎರಡನೆಯ ರಾಷ್ಟ್ರಪತಿ, ಶಿಕ್ಷಣ ಪ್ರೇಮಿ ಡಾ|ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಶ್ರೀಕೃಷ್ಣ ಪರಮಾತ್ಮನ ಜನ್ಮದಿನಗಳು ಒಂದೇ ದಿನ ಬಂದಿರುವುದು ಹಬ್ಬಗಳ ಸಂತಸವನ್ನು ಹೆಚ್ಚಿಸಿದೆ." ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪಠ್ಯಪುಸ್ತಕ ನಿರ್ದೇಶಕ ಶಂಕರನಾರಾಯಣ ಹೊಳ್ಳ ಅಭಿಪ್ರಾಯಪಟ್ಟರು. ಅವರು ಕಳೆದ 05.09.2015 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಸದಸ್ಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು, ವೇದಮೂರ್ತಿ ಕಿಳಿಂಗಾರು ನಡುಮನೆ ಸುಬ್ರಾಯ ಭಟ್, ಗ್ರಾಮೋತ್ಥಾನ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ, ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ‘ಮುದ್ದು ಕೃಷ್ಣ’ ವೇಷ ಪ್ರದರ್ಶನ ಜರಗಿತು. ವಿದ್ಯಾರ್ಥಿಗಳಾದ ಕಾವ್ಯಶ್ರೀ ಸ್ವಾಗತಿಸಿ ಪ್ರೇಮಲತ ವಂದಿಸಿದರು. ವಿದ್ಯಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Sep 1, 2015

ರಕ್ಷಾ ಬಂಧನ 2015


“ಸಹೋದರ ಪ್ರೇಮದ ಸಂಕೇತವಾಗಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಅಣ್ಣನಿಗೆ ರಕ್ಷೆಯನ್ನು ಕಟ್ಟುವ ಮೂಲಕ ಸಹೋದರಿ ತನ್ನ ಬಾಳು ಚೆನ್ನಾಗಿರುವಂತೆ ಅಭಯವನ್ನು ಪಡೆದುಕೊಳ್ಳುತ್ತಾಳೆ. ಆಧುನಿಕ ಜಗತ್ತಿನ ಸುಖ ಸೌಕರ್ಯಗಳ ಎಡೆಯಲ್ಲಿ ಈ ರೀತಿಯ ಹಬ್ಬಗಳನ್ನು ಆಚರಿಸುವುದು ನೈತಿಕ ಮೌಲ್ಯದ ಉಳಿವಿಗೆ ಸಹಾಯಕವಾಗುತ್ತದೆ ಎಂದು ನಮ್ಮ ವಿದ್ಯಾಪೀಠದ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಭಿಪ್ರಾಯಪಟ್ಟರು. ಅವರು ನಿನ್ನೆ 31.08.2015 ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ ಪೆರಡಾನ, ಶಿಕ್ಷಕಿಯರಾದ ಕಾವೇರಿ ಮತ್ತು ಶಿವಕುಮಾರಿ ಉಪಸ್ಥಿತರಿದ್ದರು. ದೀಕ್ಷಾ. ಎಸ್ ಕಾರ್ಯಕ್ರಮ ನಿರೂಪಿಸಿದರು.

Aug 23, 2015

ಓಣಂ ಆಚರಣೆ 2015





“ಮಲಯಾಳ ನಾಡಿನಲ್ಲಿ ಮಾತ್ರ ಆಚರಿಸಲ್ಪಡುತ್ತಿದ ಓಣಂ ಇಂದು ರಾಜ್ಯದ ವ್ಯಪ್ತಿಯನ್ನು ಮೀರಿ ಆಚರಿಸಲ್ಪಡುತ್ತಿದೆ. ಜಾತಿ, ಮತ ಬೇಧವಿಲ್ಲದೆ ನಾಡಿನ ಹಬ್ಬವಾಗಿ ಜನರು ಓಣಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬಗಳು ಜನರನ್ನು ಒಂದುಗೂಡಿಸುತ್ತವೆ. ಏಕತಾನತೆಯ ಬದುಕನ್ನು ಹೋಗಲಾಡಿಸಿ ಜೀವನದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡುತ್ತದೆ” ಎಂದು ಸಹಕಾರ ಭಾರತೀ ಜಿಲ್ಲಾ ಕಾರ್ಯದರ್ಶಿ ಐತ್ತಪ್ಪ ಮವ್ವಾರು ಅಭಿಪ್ರಾಯಪಟ್ಟರು. ಅವರು ಮೊನ್ನೆ 21.08.2015 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಓಣಂ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಶ್ರಿತ್ ಸ್ವಾಗತಿಸಿ ಸಂಯುಕ್ತಾ ವಂದಿಸಿದರು. ಕಿಶೋರ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Aug 19, 2015

ರಾಮಾಯಣ ಮಾಸಾಚರಣೆ




“ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು” ಎಂದು ನಿವೃತ್ತ ಉದ್ಯಮಿ ಶಂಕರನಾರಾಯಣ ಭಟ್ ಕೋಡಿಮೂಲೆ ಅಭಿಪ್ರಾಯಪಟ್ಟರು. ಅವರು ಕಳೆದ 15.08.2015 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಾಮಾಯಣ ಮಾಸಾಚರಣೆಯ ಸಮಾರೋಪ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕ್ಷೀರೋತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರನಾರಾಯಣ ರಾವ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ ಸ್ವಾಗತಿಸಿ ಸೃಷ್ಟಿಕ್ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

Aug 3, 2015

ರಕ್ಷಕ ಶಿಕ್ಷಕ ಸಂಘದ ಸಭೆ


                ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 01.08.2015 ಶನಿವಾರ ಜರಗಿತು. ಸಂದರ್ಭದಲ್ಲಿ ಪುರುಷೋತ್ತಮ ಆಚಾರ್ಯ ಮುಜುಂಗಾವು ಅಧ್ಯಕ್ಷರಾಗಿರುವ 2015-16ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎಯ್ಯೂರು ಚಂದ್ರಶೇಖರ ಭಟ್, ಚಂದ್ರಶೇಖರ ಭಟ್ ಮಡ್ವ ಮತ್ತು ಶ್ರೀಮತಿ ಶೋಭನ ನಾಯ್ಕಾಪು ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

                ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಪುರುಷೋತ್ತಮ ಭಟ್ ಕುಂಬಳೆ, ಶಶಿಧರ ಭಟ್ ಕುಂಬಳೆ, ಸುಬ್ರಾಯ ಹೇರಳ ಬಂದ್ಯೋಡು, ಕೃಷ್ಣನ್ ಮಾಯಿಪ್ಪಾಡಿ, ರಾಮಭಟ್ ಕಿದೂರು, ಶ್ರೀಮತಿ ವಿನಯಾ ಮುಂಡಕಾನ, ಶ್ರೀಮತಿ ಪದ್ಮಾವತಿ ಅನಂತಪುರ, ಶ್ರೀಮತಿ ಶೋಭಾ ನಾಯ್ಕಾಪು, ಶ್ರೀಮತಿ ಉಷಾ ಮಾಯಿಪ್ಪಾಡಿ, ಶ್ರೀಮತಿ ದೀಪಶ್ರೀ ದೊಡ್ಡಮಾಣಿ, ಶ್ರೀಮತಿ ಪಾರ್ವತಿ ಪೆರಡಾನ ಮತ್ತು ಶ್ರೀಮತಿ ಅರುಣಾದೇವಿ ಗೂಮೆಮೂಲೆ ಇವರನ್ನು ಆರಿಸಲಾಯಿತು.

Aug 2, 2015

ಗುರುಪೂರ್ಣಿಮಾ



ನಮ್ಮ ವಿದ್ಯಾಪೀಠದಲ್ಲಿ 31.07.2015 ಶುಕ್ರವಾರ ಗುರುಪೂರ್ಣಿಮೆ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಗ್ರಾಮಣಿ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಕುಂಬಳೆ, ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾ ಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಸದಾಶಿವ ಭಟ್.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶ್ರೀಗುರು ಭಾವಚಿತ್ರಕ್ಕೆ ನಮಸ್ಕರಿಸಿ ಎಲ್ಲ ಹಿರಿಯರ ಆಶೀರ್ವಾದವನ್ನು ಬೇಡಿದರು.

Aug 1, 2015

‘ಪ್ರತಿಭಾ ಭಾರತೀ’ - ಜುಲೈ 2015


ಮನುಷ್ಯನು ತನ್ನ ಸಾಹಿತ್ಯ ಮತ್ತು ಬುದ್ಧಿವಂತಿಕೆಯ ಪ್ರದರ್ಶನದ ಮೂಲಕ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಲಾಭಿರುಚಿಯನ್ನು ವ್ಯಕ್ತಪಡಿಸುವ ಮೂಲಕ ಆತ ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ. ಸಂಸ್ಕೃತದಲ್ಲಿರುವ ಸುಭಾಷಿತಗಳು ತಮ್ಮ ಅರ್ಥ ಗಾಂಭೀರ್ಯದ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಬಹುದುಎಂದು ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಜುಲೈ ತಿಂಗಳ ಪ್ರತಿಭಾ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
 
ವಿದ್ಯಾರ್ಥಿ ಸ್ಕಂದ ಮುರಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ದೀಕ್ಷಾ.ಎಸ್ ಹಿಂದಿನ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ದೀಕ್ಷಾ ವಂದಿಸಿದರು. ಆದಿತ್ಯ ಮತ್ತು ಸುಧನ್ವ ಕಾರ್ಯಕ್ರಮ ನಿರೂಪಿಸಿದರು.


Jul 27, 2015

ವಿದ್ಯಾರ್ಥಿ ನಾಯಕರು - 2015-16


ನಮ್ಮ ವಿದ್ಯಾಪೀಠದ 2015-16ನೇ ಸಾಲಿನ ವಿದ್ಯಾರ್ಥಿ ನಾಯಕರಾಗಿ ಹತ್ತನೇ ತರಗತಿಯ ಅನನ್ಯ ಪೆರಡಾನ ಮತ್ತು ಉಪನಾಯಕರಾಗಿ ಎಂಟನೇ ತರಗತಿಯ ಶ್ರೀಶಶ್ರೀ ಆಯ್ಕೆಯಾಗಿದ್ದಾರೆ. ಶುಭಾಶಯಗಳು...

Jul 25, 2015

ಶಾಲಾ ವಾಹನ


ನಮ್ಮ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಹೊಸ ವಾಹನ ಬಂದಿದೆ. ದೂರದಿಂದ ಆಗಮಿಸುವ ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ಏರ್ಪಡಿಸಲಾಗಿರುವ ಈ ವಾಹನದ ಸೌಕರ್ಯವನ್ನು ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಈ ವಾಹನವನ್ನು ಖರೀದಿಸಲು ಸಹಕರಿಸಿದ ಎಲ್ಲ ಸಹೃದಯರಿಗೆ ಧನ್ಯವಾದಗಳು...

Jun 22, 2015

ಯೋಗ ದಿನಾಚರಣೆ



ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿರುವ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲೂ ಹಮ್ಮಿಕೊಳ್ಳಲಾಯಿತು. ಹಿರಿಯ ಯೋಗಶಿಕ್ಷಕ ಎಚ್.ಶಂಕರನಾರಾಯಣ ಭಟ್ಟ ಮತ್ತು ಸೀತಾಂಗೋಳಿ ರಾಮಕೃಷ್ಣ ಹೆಬ್ಬಾರ್ ಸೂಕ್ತ ಮಾರ್ಗದರ್ಶನ ನೀಡಿದರು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು...

Jun 6, 2015

ವಿಶ್ವ ಪರಿಸರ ದಿನಾಚರಣೆ


ನಮ್ಮ ವಿದ್ಯಾಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವು ನಿನ್ನೆ 05.06.2015 ಶುಕ್ರವಾರ ಜರಗಿತು. ನಿವೃತ್ತ ಶಿಕ್ಷಕ ಡಾ|ಸದಾಶಿವ ಭಟ್ ಪೆರ್ಲ, ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು, ಕೇಶವ ಪ್ರಸಾದ್ ನಾಣಿತ್ಲು ವಿವಿಧ ಸಸಿಗಳನ್ನು ನೆಡುವ ಮೂಲಕ ಮಕ್ಕಳ ಜೊತೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಿದರು.

‘ಸ್ವಾಗತ ಭಾರತೀ - 2015’

 ಹಿಂದಿನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಕಲಿಯುವಿಕೆಗೆ ಅಗತ್ಯವಾದ ಮತ್ತು ಪೂರಕವಾದ ವ್ಯವಸ್ಥೆಗಳು ಹಲವಾರು ಇವೆ. ವಿದ್ಯಾರ್ಥಿಗಳು ಮತ್ತು ರಕ್ಷಕರು ಈ ವ್ಯವಸ್ಥೆಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಶ್ರೀಗುರುಗಳ ಆಶೀರ್ವಾದ ಇಲ್ಲಿನ ವಿದ್ಯಾರ್ಥಿಗಳ ಮೇಲಿರುವುದು ವಿದ್ಯಾರ್ಥಿಗಳ ಸೌಭಾಗ್ಯ. ಕಲಿಕೆಯೊಂದಿಗೆ ಸಂಸ್ಕೃತಿ, ಪುರಾಣದ ಮಹತ್ವದ ಅಂಶಗಳನ್ನು ಕಲಿಸುತ್ತಿರುವುದು ಸಂತಸದ ವಿಚಾರ. ಇಂತಹ ಅವಕಾಶ ಎಲ್ಲ ಆಂಗ್ಲಮಾಧ್ಯಮ ಶಾಲೆಗಳಲ್ಲಿ ದೊರಕಲಾರದು. ಹತ್ತನೇ ತರಗತಿ ವಿದ್ಯಾರ್ಥಿಗಳ ಸತತ ನಾಲ್ಕನೇ ತಂಡವು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸಿ ಮುಜುಂಗಾವು ಶಿಕ್ಷಣ ಸಂಸ್ಥೆಗಳ ಕಡೆಗೆ ಸಮಾಜದ ಗಮನವನ್ನು ಸೆಳೆದಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಂಕಲ್ಪದಂತೆ ರೂಪುಗೊಂಡ ವಿದ್ಯಾಸಂಸ್ಥೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿವೆ ಎನ್ನುವುದಕ್ಕೆ ಇದು ನೂತನ ನಿದರ್ಶನ ಎಂದು ಸಮಾಜ ಸೇವಕ ಯೋಗೀಶ ಕಡಮಣ್ಣಾಯ ಅಭಿಪ್ರಾಯಪಟ್ಟರು. ಅವರು ಮೊನ್ನೆ 01.06.2015 ಸೋಮವಾರ ನಮ್ಮ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಸ್ವಾಗತ ಭಾರತೀ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಧ್ಯಾ. ವಿ.ಶೆಟ್ಟಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ವಿದ್ಯಾಲಯಗಳಿಗೂ ಸಹಾಯ ಹಸ್ತ ನೀಡಲಾಗುತ್ತಿದೆ. ಈ ವಿದ್ಯಾಲಯದಲ್ಲಿ ತರಕಾರಿ ತೋಟವನ್ನು ಮಾಡಲು ನಾವು ಸಹಾಯ ಮಾಡುತ್ತೇವೆ. ಈ ವಿದ್ಯಾಲಯದ ಪರಿಸರವನ್ನು ಹಚ್ಚಹಸಿರಾಗಿರಿಸೋಣ ಎಂದು ಅಭಿಪ್ರಾಯಪಟ್ಟರು.

ಶಾಲಾ ಸಮಿತಿಯ ಕಾರ್ಯದರ್ಶಿ ಸತ್ಯಶಂಕರ ಭಟ್ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ ಉಪಸ್ಥಿತರಿದ್ದರು. ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೀಜಾ ಗಿರೀಶ್‌ರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಜಯಶ್ರೀ ಸ್ವಾಗತಿಸಿ ಸುಧನ್ವ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

Mar 12, 2015

ವೈದ್ಯರೊಂದಿಗೆ ಮಾತುಕತೆ


“ಬೆಳವಣಿಗೆಯ ಆರಂಭದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಕೆಲಸಗಳನ್ನು ತಾವೇ ಮಾಡುವಂತೆ ಪ್ರೇರೇಪಿಸಬೇಕು. ತಮ್ಮ ನಿತ್ಯ ನೈಮಿತ್ತಿಕ ಕಾರ್ಯಗಳನ್ನು ತಾವೇ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಿಸುವುದು ಹೆತ್ತವರ ಕರ್ತವ್ಯ. ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಮತ್ತು ಏನು ಕಲಿಯುತ್ತಿದ್ದಾರೆ ಎಂಬ ಬಗ್ಗೆ ಪೂರ್ಣ ಮಹಿತಿ ಹೆತ್ತವರಿಗೆ ಇರಬೇಕು. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯ ಅರಿವು ಮೂಡಿಸುವುದು ಹೆತ್ತವರ ಹೊಣೆಗಾರಿಕೆ” ಎಂದು ಖ್ಯಾತ ವೈದ್ಯೆ ಡಾ| ವಾರುಣಿ ಶ್ರೀರಾಮ್ ಅಭಿಪ್ರಾಯಪಟ್ಟರು. ಅವರು 26.02.2015 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಪೋಷಕರಿಗಾಗಿ ನಡೆದ ‘ವೈದ್ಯರೊಂದಿಗೆ ಮಾತುಕತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಿಕ್ಷಕಿಯರಾದ ಕುಸುಮಾ ಸ್ವಾಗತಿಸಿ ಶಿಲ್ಪಾ.ಎಸ್ ವಂದಿಸಿದರು. ಶಿವಕುಮಾರಿ.ಪಿ ಕಾರ್ಯಕ್ರಮ ನಿರೂಪಿಸಿದರು.

Jan 12, 2015

ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವ



“ವಿದ್ಯೆ ಸಂಸ್ಕಾರವನ್ನು ಕೊಡುತ್ತದೆ. ವಿನಯವನ್ನು ಬೆಳೆಸುತ್ತದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕವಾದ ಸದ್ಗುಣಗಳನ್ನು ಕಲಿಸುವ ಇಂತಹ ಶಿಕ್ಷಣ ಇಂದಿನ ಸಮಾಜಕ್ಕೆ ಅತೀ ಅಗತ್ಯ. ಸಮಾಜದ ಉಳಿವಿಗೆ ಇದು ಪೂರಕ. ಮುಜುಂಗಾವಿನ ಪರಿಸರದಲ್ಲಿ ವಿದ್ಯಾರ್ಥಿಯ ಬೆಳವಣಿಗೆಗೆ ಅಪಾರ ಸಾಧ್ಯತೆಗಳಿವೆ." ಎಂದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ ಅಭಿಪ್ರಾಯಪಟ್ಟರು. ಅವರು ಮೊನ್ನೆ 10.01.2014 ಶನಿವಾರ ನಮ್ಮ ಸಂಸ್ಥೆಯಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಮಿತಿಯ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ವಹಿಸಿದ್ದರು. ಅಭ್ಯಾಗತರಾಗಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ. ವಿ.ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಭಾಗವಹಿಸಿದರು. ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಶ್ರೀಭಾರತೀ ವಿದ್ಯಾಪೀಠದ ವರದಿಯನ್ನು ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಭೆ-ಮಾರ್ಗ ವಾಚಿಸಿದರು.
ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’ ಮತ್ತು ‘ಜ್ಞಾನದೀಪ್ತಿ’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ವಿದ್ಯಾಶ್ರೀ ಸ್ವಾಗತಿಸಿ, ಶ್ಯಾಮ ಭಟ್ ದರ್ಭೆ-ಮಾರ್ಗ ವಂದಿಸಿದರು. ವಿದ್ಯಾರ್ಥಿ ವಿಕ್ರಮ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ ವೈವಿಧ್ಯ ಜರಗಿತು.

Jan 8, 2015

ಡಾ| ವೀರೇಂದ್ರ ಹೆಗ್ಗಡೆ ಸಂದರ್ಶನ

ನಮ್ಮ ಸಂಸ್ಥೆಯ ಆವರಣದಲ್ಲಿ ಜರಗಿದ ಕೃಷಿ ಉತ್ಸವದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರು ನಮ್ಮ ವಿದ್ಯಾಪೀಠಕ್ಕೆ ಆಗಮಿಸಿ ಶಾಲಾ ಪರಿಸರದ ನವೀಕರಣ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಪ್ರಣಾಮಗಳು...

ಕೊಂಡೆವೂರು ಶ್ರೀ ಭೇಟಿ

ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಇತ್ತೀಚೆಗೆ ಸಂಸ್ಥೆಯಲ್ಲಿ ಜರಗಿದ ಕೃಷಿ ಉತ್ಸವದ ಸಂದರ್ಭ ನಮ್ಮ ವಿದ್ಯಾಪೀಠಕ್ಕೆ ಆಗಮಿಸಿ ಅನುಗ್ರಹಿಸಿದರು. ಪ್ರಣಾಮಗಳು...

ಜನವರಿ 10 ರಂದು ವರ್ಧಂತ್ಯುತ್ಸವ, ಬನ್ನಿ...


ನಮ್ಮ ವಿದ್ಯಾಪೀಠದ ವರ್ಧಂತ್ಯುತ್ಸವವು 10.01.2015 ಶನಿವಾರ ಶಾಲಾ ಪರಿಸರದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕುಂಬಳೆ ಪುರುಷೋತ್ತಮ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಪರಾಹ್ನ 3.00 ರಿಂದ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಮದನಗುಳಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ತಿಲು, ಕಾಸರಗೋಡು ನಗರಸಭೆಯ ಮಾಜಿ ಅಧ್ಯಕ್ಷ ಎಸ್.ಜೆ.ಪ್ರಸಾದ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತಾವೂ ಬನ್ನಿ, ತಮ್ಮವರನ್ನೂ ಕರೆತನ್ನಿ...