Jan 29, 2011

ವಾರ್ಷಿಕ ವರದಿ:-೨೦೧೦-೧೧

ನಿನ್ನೆ ನಮ್ಮ ಸಂಸ್ಥೆಗಳ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು. ಸಂಸ್ಥೆಯ ವಾರ್ಷಿಕ ವರದಿಯನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನ ಹರಿಸಿ, ನಿಮ್ಮ ಸಲಹೆ ಸೂಚನೆಗಳನ್ನು ನೀಡಿ. ಕಾರ್ಯಕ್ರಮದ ಫೋಟೋ, ವರದಿಗಳ ಜೊತೆ ಮತ್ತೆ ಬರುತ್ತೇವೆ.

      ||ಹರೇರಾಮ||
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ
ಶ್ರೀ ಸಂಸ್ಥಾನ ಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀ ಭಾರತೀ ವಿದ್ಯಾಪೀಠ, ಮುಜುಂಗಾವು.
ಎಡನಾಡು-ಕುಂಬಳೆ, ಕಾಸರಗೋಡು-೬೭೧೩೨೧


ಪರಮಪೂಜ್ಯ ಶ್ರೀಗುರುಗಳ ದಿವ್ಯಚರಣಾರವಿಂದಗಳಿಗೆ ಮನಸಾ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ಸನಿಹಸ್ಥಿತನಾದ ಪಾರ್ಥಸಾರಥಿಯನ್ನು ಸ್ಮರಿಸುತ್ತಾ, ವೇದಿಕೆಯಲ್ಲಿರುವ ಗಣ್ಯರಿಗೆ ಹಾಗೂ ಸಭೆಯಲ್ಲಿ ಆಸೀನರಾದ ಎಲ್ಲಾ ಸಹೃದಯ ಬಂಧುಗಳಿಗೆ ವಂದಿಸಿ, ಶ್ರೀ ಭಾರತೀ ವಿದ್ಯಾಪೀಠದ ವಾರ್ಷಿಕ ವರದಿಯನ್ನು ತಮ್ಮ ಮುಂದಿಡಲು ಸಂತಸಪಡುತ್ತೇನೆ.

ಈ ಶೈಕ್ಷಣಿಕ ವರ್ಷದಲ್ಲಿ ೯ನೇ ತರಗತಿಯನ್ನು ಪ್ರಾರಂಭಿಸಲಾಗಿದ್ದು, ಶಿಶುಮಂದಿರದಿಂದ ೯ನೇ ತರಗತಿಯವರೆಗೆ ಒಟ್ಟು ೧೬೪ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ೧೧ಜನ ಅಧ್ಯಾಪಕರು, ಒಬ್ಬರು ಅಧ್ಯಾಪಕೇತರ ಮತ್ತು ಮುಖ್ಯೋಪಾಧ್ಯಾಯರು ಪೂರ್ಣವಾಗಿಯೂ, ಸಂಗೀತದ ಅಧ್ಯಾಪಿಕೆ, ನೃತ್ಯದ ಅಧ್ಯಾಪಿಕೆ, ಯೋಗ ಮತ್ತು ಚಿತ್ರಕಲಾ ಅಧ್ಯಾಪಕರು ಅರೆಕಾಲಿಕವಾಗಿಯೂ ವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ಕೇಂದ್ರ ಮಾನವಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‍ನ ನೇರ ಅಂಗೀಕಾರವನ್ನು ಪಡೆದ ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ ಇದರ ಪ್ರಥಮ ಅಂಗಸಂಸ್ಥೆಯಾಗಿ ನಮ್ಮ ವಿದ್ಯಾಲಯವು ಮಾನ್ಯತೆಯನ್ನು ಪಡೆದಿದೆ.

ವಿದ್ಯಾಲಯದಲ್ಲಿ ಶಿಶುಮಂದಿರದಿಂದಲೇ ಕನ್ನಡ ಮತ್ತು ಆಂಗ್ಲಭಾಷೆಯ ಪರಿಚಯವನ್ನು ಮಾಡಿಕೊಡುತ್ತಿದ್ದು ೨ನೇ ತರಗತಿಯಿಂದ ಸಂಸ್ಕೃತ, ೩ನೇ ತರಗತಿಯಿಂದ ಹಿಂದಿಭಾಷೆಯನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಠಿಯಲ್ಲಿಟ್ಟು ನೈತಿಕ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಯಕ್ಷಗಾನವೇ ಮೊದಲಾದ ಶಿಕ್ಷಣವನ್ನು ಅನುಷ್ಠಾನಗೊಳಿಸಲಾಗಿದೆ. ೫ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. ಶಿಶುಮಂದಿರದಿಂದ ೪ನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಬೇಕೆನ್ನುವ ಉದ್ದೇಶದಿಂದ ಕನ್ನಡಮಾಧ್ಯಮ ಮತ್ತು ೫ ಮತ್ತು ಮೇಲ್ಪಟ್ಟ ತರಗತಿಗಳು ಆಂಗ್ಲಮಾಧ್ಯಮದಲ್ಲಿ ನಡೆಸಲಾಗುತ್ತಿದೆ.

ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಗಳು:

ಕಳೆದ ಫೆಬ್ರವರಿ ತಿಂಗಳ ೨೬ ಮತ್ತು ೨೭ ಶುಕ್ರವಾರ ಮತ್ತು ಶನಿವಾರಗಳಂದು ಸಮೂಹವಿದ್ಯಾಸಂಸ್ಥೆಗಳಲ್ಲಿ ಮಹಾವಿದ್ಯಾಲಯದ ದಶಮಾನೋತ್ಸವ ಮತ್ತು ವಿದ್ಯಾಪೀಠದ ವರ್ಧಂತ್ಯುತ್ಸವವು ಶ್ರೀ ಗುರುಗಳ ದಿವ್ಯಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಸಭಾಕಾರ್ಯಕ್ರಮಗಳಲ್ಲಿ ಜಿಲ್ಲೆಯ, ಹೊರರಾಜ್ಯಗಳ ಗಣ್ಯ ಅತಿಥಿಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ದಿನಾಂಕ ೨೬ರಂದು ಸಾಯಂಕಾಲ ೫ಗಂಟೆಗೆ ಶ್ರೀಗುರುಗಳು ವಿದ್ಯಾಲಯಕ್ಕೆ ಆಗಮಿಸಿ, ರಾತ್ರಿ ಶ್ರೀರಾಮದೇವರಿಗೆ ಪೂಜೆಯನ್ನು ನೆರವೇರಿಸಿದರು. ದಿನಾಂಕ ೨೭ರಂದು ಬೆಳಗ್ಗೆ ಶ್ರೀಶ್ರೀಗಳಿಂದ ರಾಮದೇವರ ಪೂಜೆ, ಶ್ರೀಗುರುಗಳಿಗೆ ಭಿಕ್ಷಾಸೇವೆ, ಪಾದುಕಾಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಾಯಂಕಾಲ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀಗುರುಗಳು ದಿವ್ಯಸಾನ್ನಿಧ್ಯವನ್ನು ವಹಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳಿಂದ ವಿದ್ಯಾಸಂಸ್ಥೆಗಳ ಹಸ್ತಪ್ರತಿ ಬಿಡುಗಡೆ ಮತ್ತು ವಿದ್ಯಾಲಯಮಟ್ಟದಲ್ಲಿ ನಡೆದ ಬೌದ್ಧಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು. ವಿದ್ಯಾಲಯದ ಚಟುವಟಿಕೆಗಳ ಬಗ್ಗೆ ಶ್ರೀಶ್ರೀಗಳು ತಮ್ಮ ಆಶೀರ್ವಚನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗುರುಗಳು ಆಗಮಿಸಿದ ಎಲ್ಲರಿಗೂ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.

ದಿನಾಂಕ ೧೫-೦೩-೨೦೧೦ ನೇ ಸೋಮವಾರದಂದು ಕಳೆದ ಶೈಕ್ಷಣಿಕ ವರ್ಷದ ’ಜ್ಞಾನದೀಪ್ತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಹಿಂದಿಭಾಷೆಯ ಮುಖ್ಯ ಕಾರ್ಯಕ್ರಮದೊಂದಿಗೆ ಉಳಿದೆಲ್ಲಾ ವಿಷಯಗಳಿಗೂ ಪ್ರಾಧಾನ್ಯತೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಮಹಾಲಿಂಗಯ್ಯ, ಅಧಿಕಾರಿಮನೆ, ಎಡನಾಡು ಇವರು ಕಾರ್ಯಕ್ರಮವನ್ನು ಮೆಚ್ಚಿಕೊಂಡು ಶುಭಹಾರೈಸಿದರು.

ದಿನಾಂಕ ೧೬-೦೩-೨೦೧೦ನೇ ಮಂಗಳವಾರದಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ಬೇವು-ಬೆಲ್ಲ ಹಂಚುವುದರ ಮೂಲಕ ಯುಗಾದಿಯನ್ನು ಆಚರಿಸಲಾಯಿತು. ಈ ದಿನ ನಮ್ಮ ವಿದ್ಯಾಲಯದ ಬ್ಲಾಗ್-ಪ್ರತಿಭಾಭಾರತಿಯನ್ನು ಶ್ರೀಗುರುಗಳು ತಮ್ಮ ದಿವ್ಯಹಸ್ತದಿಂದ ಗಿರಿನಗರದ ಶ್ರೀಮಠದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಗಳು ’ಬ್ಲಾಗ್’ನ್ನು ವೀಕ್ಷಿಸಿ ಮೆಚ್ಚಿಕೊಂಡು ಹರಸಿದರು.

ದಿನಾಂಕ ೩೧-೦೩-೨೦೧೦ ಬುಧವಾರದಂದು ೨೦೦೯-೧೦ನೇ ಸಾಲಿನ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭವನ್ನು ಪ್ರತಿಭಾಭಾರತೀ ಕಾರ್ಯಕ್ರಮ ನಡೆಸುವುದರ ಮೂಲಕ ನಡೆಸಲಾಯಿತು. ಅತಿಥಿಗಳಾಗಿ ಶ್ರೀಯುತ ಥೋಮಸ್ ಡಿ.ಸೋಜ(ಅಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ಆಗಮಿಸಿ ವಿದ್ಯಾಲಯದ ಚಟುವಟಿಕೆಗಳನ್ನು ಮೆಚ್ಚಿಕೊಂಡರು.
೨೦೦೯-೧೦ನೇ ಶೈಕ್ಷಣಿಕ ವರ್ಷದಲ್ಲಿ ೨೧೯ ಶಾಲಾದಿನಗಳು ನಡೆದಿದ್ದು ಈ ಸಂದರ್ಭದಲ್ಲಿ ಗರಿಷ್ಠ ಹಾಜರಾತಿ(೨೧೯)ಯನ್ನು ಪಡೆದ ೧೮ ವಿದ್ಯಾರ್ಥಿಗಳನ್ನು ಅಗ್ರೇಸರ ಪ್ರಶಸ್ತಿಯನ್ನು ನೀಡಿ ಗುರುತಿಸಲಾಯಿತು.
ದಿನಾಂಕ ೧-೦೬-೨೦೧೦ನೇ ಮಂಗಳವಾರದಂದು ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ಶ್ರೀಯುತ ಜಯಂತ ಪಾಟಾಳಿ ಸೀತಾಂಗೋಳಿ(ಉಪಾಧ್ಯಕ್ಷರು, ಪುತ್ತಿಗೆ ಗ್ರಾಮಪಂಚಾಯತು) ದೀಪ ಬೆಳಗುವುದರ ಮೂಲಕ ಚಾಲನೆಗೊಳಿಸಿದರು. ಈ ಸಂದರ್ಭದಲ್ಲಿ ಧರ್ಮತ್ತಡ್ಕ ದುರ್ಗಾಪರಮೇಶ್ವರೀ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ರಾಮಚಂದ್ರ ಭಟ್ ಉಳುವಾನ ಉಪಸ್ಥಿತರಿದ್ದು ಶುಭ ಹಾರೈಸಿದರು.

ದಿನಾಂಕ ೧೭-೦೭-೨೦೧೦ ಶನಿವಾರದಿಂದ ಕರ್ಕಾಟಕ ಮಾಸದಲ್ಲಿ ನಡೆಸುವ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಒಂದು ತಿಂಗಳ ಕಾಲ ಪ್ರಾರ್ಥನಾ ಅವಧಿಯ ನಂತರ ರಾಮಯಣ ವಾಚನ ಕಾರ್ಯಕ್ರಮವನ್ನೂ ನಡೆಸಲಾಯಿತು.
ದಿನಾಂಕ ೨೧-೦೭-೨೦೧೦ನೇ ಬುಧವಾರದಂದು ಶ್ರೀಗುರುಗಳ ಯೋಜನೆಯಾದ ವನಜೀವನಯಜ್ಞ ಕಾರ್ಯಕ್ರಮವನ್ನು ಗಿಡಗಳನ್ನು ನೆಡುವ ಮತ್ತು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನಡೆಸಲಾಯಿತು. ಸಸಿಗಳನ್ನು ಪುತ್ತಿಗೆ ಗ್ರಾಮಪಂಚಾಯತು ವಿದ್ಯಾಲಯಕ್ಕೆ ಒದಗಿಸಿದ್ದು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಪುತ್ತಿಗೆ ಗ್ರಾಮಪಂಚಾಯತು ಉಪಾಧ್ಯಕ್ಷರಾದ ಶ್ರೀಯುತ ಜಯಂತ ಪಾಟಾಳಿ ಆಗಮಿಸಿ ಸಾಂಕೇತಿಕವಾಗಿ ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ದಿನಾಂಕ ೨೬-೦೭-೨೦೧೦ನೇ ಸೋಮವಾರದಂದು ಗುರುಪೂರ್ಣಿಮೆಯ ನಿಮಿತ್ತ ಶ್ರೀಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗುರುಹಿರಿಯರಿಗೆ ವಂದಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ದಿನಾಂಕ ೧೫-೦೮-೨೦೧೦ನೇ ರವಿವಾರದಂದು ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ವಿದ್ಯಾಲಯದಲ್ಲಿ ರಾಷ್ಟ್ರಧ್ವಜಾರೋಹಣವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ದೇಶಭಕ್ತಿಗೀತೆ, ಭಾಷಣ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದರು.
ದಿನಾಂಕ ೨೦-೦೮-೨೦೧೦ನೇ ಶುಕ್ರವಾರದಂದು ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ಹಿರಿಯರೊಂದಿಗೆ ಮಾತುಕತೆ’ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಅಭ್ಯಾಗತರಾಗಿ ಶ್ರೀಯುತ ಅಡ್ಕ ಗೋಪಾಲಕೃಷ್ಣ ಭಟ್ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ನಂಬಿಕೆ ಇತ್ಯಾದಿ ವಿಚಾರಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ದಿನಾಂಕ ೨೧-೦೮-೨೦೧೦ನೇ ಶನಿವಾರದಂದು ಓಣಂ ಹಬ್ಬದ ಸಲುವಾಗಿ ಹೂವಿನ ರಂಗವಲ್ಲಿ ಮತ್ತು ಓಣಂ ಹಬ್ಬದ ವಿಶೇಷ ಊಟವನ್ನು ನಡೆಸಲಾಯಿತು. ಈ ಕಾರ್ಯಕ್ರಮದೊಂದಿಗೆ ರಕ್ಷಾಬಂಧನ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಓಣಂ ಊಟದ ಬಗ್ಗೆ ರಕ್ಷಕರು ನಮ್ಮೊಂದಿಗೆ ಸಹಕರಿಸಿದ್ದರು.

ದಿನಾಂಕ ೧-೦೯-೨೦೧೦ನೇ ಬುಧವಾರದಂದು ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಮುದ್ದುಕೃಷ್ಣವೇಷ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ ೭-೦೯-೨೦೧೦ನೇ ಮಂಗಳವಾರದಂದು ಶ್ರೀಕ್ಷೇತ್ರ ಗೋಕರ್ಣದ ಅಶೋಕವನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀಗುರುಗಳನ್ನು ಅಧ್ಯಾಪಕವೃಂದ ಭೇಟಿಮಾಡಿ ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ಆಶೀರ್ಮಂತ್ರಾಕ್ಷತೆಯನ್ನೂ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀಗುರುಗಳು ವಿದ್ಯಾರ್ಥಿಗಳ ಪ್ರಗತಿಗೆ ಅಧ್ಯಾಪಕರು ಶೈಕ್ಷಣಿಕವಾಗಿ ನೀಡಬೇಕಾದ ಅಮೂಲ್ಯ ಮಾಹಿತಿಗಳನ್ನು ನೀಡಿದರು.

ದಿನಾಂಕ ೧೦-೦೯-೨೦೧೦ನೇ ಶುಕ್ರವಾರದಂದು ಗಣೇಶ ಚತುರ್ಥಿಯ ಅಂಗವಾಗಿ ವಿದ್ಯಾಸಂಸ್ಥೆಗಳಲ್ಲಿ ಗಣಪತಿ ಹವನವನ್ನು ನಡೆಸಲಾಯಿತು.

ದಿನಾಂಕ ೧೭-೧೦-೨೦೧೦ ರವಿವಾರದಂದು ವಿದ್ಯಾದಶಮಿ ಪ್ರಯುಕ್ತ ಶಾರದಾ ಪೂಜೆಯನ್ನು ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.

ದಿನಾಂಕ ೮-೧೧-೨೦೧೦ನೇ ಸೋಮವಾರದಿಂದ ೧೨-೧೧-೨೦೧೦ನೇ ಶುಕ್ರವಾರದವರೆಗೆ ಮೈತ್ರೇಯಿ ಗುರುಕುಲದ ಶ್ರದ್ಧಾಗಣದ ವಿದ್ಯಾರ್ಥಿನಿಯಾದ ಕುಮಾರಿ ಪಾರ್ವತಿ ಎಡಪ್ಪಾಡಿ ಇವಳು ಶಿಶುಮಂದಿರ, ೧ ಮತ್ತು ೨ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಗೋಕುಲ ಕಾರ್ಯಕ್ರಮವನ್ನು ನಡೆಸಿಕೊಟ್ಟಳು.

ದಿನಾಂಕ ೧೩-೧೨-೨೦೧೦ನೇ ಸೋಮವಾರದಿಂದ ವಿದ್ಯಾಲಯಮಟ್ಟದ ಬೌದ್ಧಿಕ ಸ್ಪರ್ಧೆಗಳನ್ನು ವಿವಿಧ ಹಂತಗಳಲ್ಲಿ ನಡೆಸಲಾಯಿತು. ಇದೇ ದಿನ ಮಧ್ಯಾಹ್ನ ೨-೩೦ರಿಂದ ಪಾಂಗಾಳ ಗೋಪಾಲಕೃಷ್ಣ ಶೆಣೈ ಇವರಿಂದ ವಿಶೇಷ ಜಾದೂ ಕಾರ್ಯಕ್ರಮವು ನಡೆಯಿತು.

ದಿನಾಂಕ ೭-೦೧-೨೦೧೧ನೇ ಶುಕ್ರವಾರ ಮತ್ತು ೮-೧೧-೨೦೧೧ನೇ ಶನಿವಾರಗಳಂದು ವಿದ್ಯಾಲಯ ಮಟ್ಟದ ಕ್ರೀಡೋತ್ಸವ ೨೦೧೦-೨೦೧೧ನ್ನು ನಡೆಸಲಾಯಿತು. ಕ್ರೀಡೋತ್ಸವಕ್ಕೆ   ಅತಿಥಿಗಳಾಗಿ ಶ್ರೀಯುತ ಶಂಕರಪ್ರಸಾದ ಕುಂಚಿನಡ್ಕ (ನಿವೃತ್ತ ಶಾರೀರಿಕ ಶಿಕ್ಷಕರು) ಆಗಮಿಸಿ ಕ್ರೀಡಾಕೂತಕ್ಕೆ ಚಾಲನೆಯನ್ನು ನೀಡಿ, ಸೂಕ್ತ ಮಾರ್ಗದರ್ಶನ ನೀಡಿದರು.

ಶೈಕ್ಷಣಿಕಪ್ರವಾಸ
ದಿನಾಂಕ ೧೯-೭-೨೦೧೦ನೇ ಸೋಮವಾರದಂದು ೭, ೮ ಮತ್ತು೯ನೇ ತರಗತಿ ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಯನ್ವಯ ಕೃಷಿಕ್ಷೇತ್ರ ಸಂದರ್ಶನಕ್ಕೆ ಶ್ರೀಯುತ ಚಂದ್ರಶೇಖರ ಭಟ್ಟ ಎಯ್ಯೂರು ಇವರ ಗದ್ದೆಕೃಷಿ ವೀಕ್ಷಣೆಗೆ ಕರೆದೊಯ್ಯಲಾಯಿತು. ದಿನಾಂಕ ೨೧-೭-೨೦೧೦ನೇ ಬುಧವಾರದಂದು ೫ ಮತ್ತು ೬ನೇ ತರಗತಿ ವಿದ್ಯಾರ್ಥಿಗಳನ್ನು ಸನಿಹದ ಶ್ರೀಯುತ ಉಮೇಶ್ ಮುಜುಂಗಾವು ಇವರ ಕೃಷಿಕ್ಷೇತ್ರಕ್ಕೆ ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉತ್ಸಾಹದಿಂದ ಭಾಗವಹಿಸಿ ಮಾಹಿತಿಗಳನ್ನು ಪಡೆದುಕೊಂಡರು.

ಪರೀಕ್ಷೆಗಳು-ಸ್ಪರ್ಧೆಗಳು-ಮತ್ತು ಪ್ರಶಸ್ತಿಗಳು
ದಿನಾಂಕ ೨೪-೦೭-೨೦೧೦ನೇ ಶನಿವಾರದಂದು ಕೊಡ್ಲಮೊಗರು ವಾಣೀವಿಜಯ ವಿದ್ಯಾಲಂiiದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಮ್ಮಿಕೊಂಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾಲಯದ ೧೪ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ನಿರ್ವಹಣೆ ತೋರಿದರು. ಈ ಸ್ಪರ್ಧೆಗಳಲ್ಲಿ U.P ವಿಭಾಗದ ಸಮೂಹಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವು ನಮ್ಮ ವಿದ್ಯಾಲಯಕ್ಕೆ ದೊರೆತಿರುತ್ತದೆ.

ದಿನಾಂಕ ೯-೧೦-೨೦೧೦ನೇ ಶನಿವಾರದಂದು ಚಿನ್ಮಯ ವಿದ್ಯಾಲಯ ಕಾಸರಗೋಡು ಇವರು ಜಿಲ್ಲಾಮಟ್ಟದಲ್ಲಿ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಲಯದ ೭ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಶಾಸ್ತ್ರಪ್ರತಿಭಾ ಪರಿಷತ್ತು ಕೇರಳ ಘಟಕ ಇದರ ವತಿಯಿಂದ ದಿನಾಂಕ ೧೩-೧೧-೨೦೧೦ನೇ ಶನಿವಾರದಂದು ಜಿಲ್ಲಾ ಮಟ್ಟದಲ್ಲಿ ನಡೆಸಿದ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾಲಯದ ೩೯ ವಿದ್ಯಾರ್ಥಿಗಳು ಭಾಗವಹಿಸಿ ೨೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ದ್ವಿತೀಯ ಹಂತದ ಪರೀಕ್ಷೆಯಲ್ಲಿ ಭಾಗವಹಿಸಿರುತ್ತಾರೆ.

ತರಬೇತಿಗಳು ಮತ್ತು ಉಪನ್ಯಾಸಗಳು

ದಿನಾಂಕ ೪-೦೫-೨೦೧೦ ರಿಂದ ೬-೦೫-೨೦೧೦ರವರೆಗೆ ಮೂರು ದಿನಗಳ ಕಾಲ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ಮತ್ತು ಬದಿಯಡ್ಕ ಜಂಟಿಯಾಗಿ ಅಧ್ಯಾಪಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಿ ಪಾಠ್ಯಕ್ರಮಗಳ ತರಬೇತಿಯನ್ನು ನೀಡಲಾಯಿತು.

ದಿನಾಂಕ ೧೭-೦೫-೨೦೧೦ರಿಂದ ಹತ್ತು ದಿನಗಳ ಕಾಲ ೫ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲೀಷ್ ತರಬೇತಿ ಮತ್ತು ಶಾರೀರಿಕ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಚಂದ್ರಪ್ರಭಾ ಬಿ ರಾವ್ ಮುಂಬೈ ಮತ್ತು ಶ್ರೀಯುತ ಶಂಕರಪ್ರಸಾದ್ ಕುಂಚಿನಡ್ಕ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದಿನಾಂಕ ೨೨-೦೧-೨೦೧೧ನೇ ಶನಿವಾರದಂದು ಶ್ರೀಯುತ ಗಣಪತಿ ಭಟ್ ಮಧುರಕಾನನ (ಭೂಗರ್ಭಶಾಸ್ತ್ರಜ್ಞರು) ಇವರಿಂದ ೭, ೮ ಮತ್ತು ೯ನೇ ತರಗತಿ ವಿದ್ಯಾರ್ಥಿಗಳಿಗೆ ಭೂಮಿಯ ಶಿಲಾರಚನೆ, ಅಂತರ್ಜಲದಂತಹ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಶೈಕ್ಷಣಿಕ ವರ್ಷದ ವಿಶೇಷ ಕಾರ್ಯಕ್ರಮವಾದ ’ವೈದ್ಯರ ಮಾತುಗಳು’ ಪ್ರಥಮ ಕಾರ್ಯಕ್ರಮವನ್ನು ದಿನಾಂಕ ೧೨-೦೮-೨೦೧೦ನೇ ಗುರುವಾರದಂದು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಡಾ|| ಮಾಲತೀ ಪ್ರಕಾಶ್ ನೀರ್ಚಾಲ್ ಇವರು ಆಗಮಿಸಿ ಶುಚಿತ್ವ, ಆರೋಗ್ಯ ಮತ್ತು ಜೀವನ ಎಂಬ ವಿಷಯಗಳ  ಬಗ್ಗೆ ಉಪನ್ಯಾಸವನ್ನು ನೀಡಿದರು.
ದಿನಾಂಕ ೨೪-೦೯-೨೦೧೦ನೇ ಶುಕ್ರವಾರದಂದು ಇಂಡಿಯನ್ ಡೆಂಟಲ್ ಎಸೋಸಿಯೇಷನ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಡಾ|| ಡಿ.ಪಿ ಭಟ್ ಕುಂಬಳೆ ಇವರು ದಂತ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು.

ಈ ಶೈಕ್ಷಣಿಕ ವರ್ಷದ ಓಣಂ ವಿರಾಮದಲ್ಲಿ ೧೦ ದಿನಗಳ ಕಾಲ ವಿದ್ಯಾರ್ಥಿಗಳಿಗೆ ’ರಂಗಶಿಕ್ಷಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ರಂಗನಿರ್ದೇಶಕರಾದ ಶ್ರೀಯೂತ ಮೂರ್ತಿ ದೇರಾಜೆ ಮತ್ತು ಬಳಗದವರು ವಿದ್ಯಾರ್ಥಿಗಳಿಗೆ ರಂಗ ತರಬೇತಿಯನ್ನು ನೀಡಿದರು.

ವಿದ್ಯಾರ್ಥಿವೇತನ ಮತ್ತು ವಿದ್ಯಾನಿಧಿ ಯೋಜನೆ
ಕೇರಳ ಸರಕಾರದಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ನಮ್ಮ ವಿದ್ಯಾಲಯದಲ್ಲಿಯೂ ದೊರೆಯುತ್ತಿದ್ದು ೨೦೧೦-೧೧ನೇ ಶೈಕ್ಷಣಿಕ ವರ್ಷದಲ್ಲಿ ದೊರಕಿದ ಮೊತ್ತವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.

ವಿದ್ಯಾಸಂಸ್ಥೆಯ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಸರಿದೂಗಿಸಲು ’ವಿದ್ಯಾನಿಧಿ ಯೋಜನೆ’ ಎನ್ನುವ ಹೆಸರಿನ ದೂರಗಾಮೀ ಯೋಜನೆಯನ್ನು ರೂಪೀಕರಿಸಿದ್ದು ಈ ಯೋಜನೆಗೆ ವಾರ್ಷಿಕ ೫೦೦೦/- ರೂ.ಗಳನ್ನು ನಿಗದಿಪಡಿಸಲಾಗಿದೆ. ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಖರ್ಚುವೆಚ್ಚಗಳಿಗೆ ಅಳವಡಿಸಿಕೊಂಡು ಅಂತಹ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದನ್ನು ವಿನಿಯೋಗಿಸಲಾಗುವುದು. ಈ ಯೋಜನೆಯಲ್ಲಿ ಇದುವರೆಗೆ ೧೯ ಜನ ವಿದ್ಯಾಭಿಮಾನಿಗಳು ನಮ್ಮೊಂದಿಗೆ ಕೈಜೋಡಿಸಿದ್ದು, ವಿದ್ಯಾಭಿಮಾನಿಗಳಾದ ತಮ್ಮೆಲ್ಲರ ಸಹಾಯಹಸ್ತವನ್ನು ಈ ಸಂದರ್ಭದಲ್ಲಿ ಬಯಸುತ್ತೇನೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಲಯಕ್ಕೆ ಶ್ರೀ ಮಠದ ವತಿಯಿಂದ ೪ ಮತ್ತು ಶ್ರೀ ಸುರೇಶ್ ದೊಡ್ಡಮಾಣಿ ಮತ್ತು ಮನೆಯವರು ೨ ಕಂಪ್ಯೂಟರ್ ಗಳನ್ನು ನೀಡಿ ಸಹಕರಿಸಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ. ಇದಕ್ಕೆ ಪೂರಕವಾಗಿ ದಾನಿಗಳಿಂದ ರೂ.೧೨,೦೦೦/- ಮೌಲ್ಯದ UPS ವಿದ್ಯಾಲಯಕ್ಕೆ ದೊರಕಿರುತ್ತದೆ.
 
ಪ್ರತಿಭಾ ಭಾರತಿ - ಜ್ಞಾನದೀಪ್ತಿ ಮತ್ತು ಮಾಹಿತಿ ತಂತ್ರಜ್ಞಾನ ಸಂಘಗಳು:

ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕಾಗಿ ವಿದ್ಯಾರ್ಥಿಗಳೇ ನಿರೂಪಿಸಿ, ನಿರ್ವಹಿಸುವ ಸಭಾಕಾರ್ಯಕ್ರಮ ’ಪ್ರತಿಭಾಭಾರತೀ’ ಪ್ರತೀ ತಿಂಗಳೂ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ಆಗಮಿಸಿದ  ಅತಿಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿವಿಧ ಪಠ್ಯ ವಿಷಯಗಳಿಗೆ ಸಂಬಂಧಪಟ್ಟಂತೆ ’ಜ್ಞಾನದೀಪ್ತಿ ಸಂಗಮ’ ಎಂದು ಹೆಸರಿಸಲಾದ ಸಂಘವೊಂದು ನಮ್ಮ ವಿದ್ಯಾಲಯದಲ್ಲಿದ್ದು ಪ್ರಭೋದನ, ವಿಕಸನ, ಚಿಂತನವೆನ್ನುವ ಧ್ಯೇಯದೊಂದಿಗೆ ಪ್ರತಿತಿಂಗಳೂ ಈ ಸಂಘದ ಅಡಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಪಟ್ಟು ವಿಚಾರಗೋಷ್ಠಿಗಳನ್ನು ನಡೆಸುತ್ತಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಮಾಹಿತಿ ತಂತ್ರಜ್ಞಾನ ಸಂಘವನ್ನು ರೂಪಿಸಿದ್ದು ವಿದ್ಯಾರ್ಥಿಗಳು ಈ ಸಂಘದ ಅಡಿಯಲ್ಲಿ ಪ್ರೋಜೆಕ್ಟ್‌ಗಳೊಂದಿಗೆ ಸೆಮಿನಾರ್‌ಗಳನ್ನು ನಡೆಸುತ್ತಿದ್ದಾರೆ.

ಇದಲ್ಲದೇ ವಿದ್ಯಾರ್ಜನೆಯೊಂದಿಗೆ ಆಧ್ಯಾತ್ಮಿಕವಾಗಿಯೂ ವಿದ್ಯಾರ್ಥಿಗಳು ಬೆಳವಣಿಗೆ ಹೊಂದುವ ದೃಷ್ಠಿಯಿಂದ ಗುರುವಾರಗಳಂದು ಭಜನಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿರಿಸಿ ಪ್ರತೀ ೧೫ ದಿನಗಳಿಗೊಮ್ಮೆ ಅಧ್ಯಾಪಕರ ಸಭೆ ನಡೆಯುತ್ತಿದೆ. ರಕ್ಷಕ-ಶಿಕ್ಷಕ ಸಂಘದ ಸಭೆ ಮತ್ತು ಆಡಳಿತಮಂಡಳಿ ಸಭೆಗಳು ನಡೆಯುತ್ತಿದ್ದು ವಿದ್ಯಾಲಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ವಿದ್ಯಾಲಯದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ರಕ್ಷಕರು ಧನಸಹಾಯಗಳೊಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದು ಈ ಸಂದರ್ಭದಲ್ಲಿ ರಕ್ಷಕರನ್ನು ಸ್ಮರಿಸುತ್ತೇನೆ.

ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯು ಮುಷ್ಠಿಭಿಕ್ಷಾ ಯೋಜನೆಯನ್ವಯ ನಡೆಯುತ್ತಿದ್ದು ಊರಿನಿಂದಲ್ಲದೇ ಪರವೂರಿನಿಂದಲೂ ಅಕ್ಕಿ ನಮ್ಮಲ್ಲಿಗೆ ಬರುತ್ತಿದೆ. ವಿದ್ಯಾರ್ಥಿಗಳ ಮನೆಯಿಂದಲೂ ಈ ಯೋಜನೆಗೆ ಸ್ಪಂದನ ದೊರೆತಿದ್ದು ಮಧ್ಯಾಹ್ನದ ಊಟದ ಯೋಜನೆಗೆ ತಮ್ಮೆಲ್ಲರ ಸಹಾಯವನ್ನೂ ಬಯಸುತ್ತೇನೆ.

ಶ್ರೀಗುರುಗಳ ದಿವ್ಯಸಂಕಲ್ಪವನ್ನು ಈಡೇರಿಸುವ ಉದ್ದೇಶದಿಂದ ಆಡಳಿತಮಂಡಳಿ, ಅಧ್ಯಾಪಕವೃಂದ, ರಕ್ಷಕ-ಶಿಕ್ಷಕ ಸಂಘ ನಿರಂತರ ಶ್ರಮಿಸುತ್ತಿದ್ದು ವಿದ್ಯಾಭಿಮಾನಿಗಳ ಸಹಾಯ ಸಹಕಾರಗಳು ದೊರಕುತ್ತಿದೆ. ವಿದ್ಯಾಲಯದ ಪ್ರಗತಿಯಲ್ಲಿ ಸಹಕರಿಸಿದ ದಾನಿಗಳನ್ನು ಮತ್ತು ಸಲಹೆಗಳನ್ನು ನೀಡಿದ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ವಿದ್ಯಾಲಯದ ಇನ್ನೂ ಹೆಚ್ಚಿನ ಪ್ರಗತಿಗಾಗಿ ತಮ್ಮೆಲ್ಲರ ಸಹಾಯ-ಸಹಕಾರಗಳನ್ನು ಬಯಸುತ್ತಾ ಶ್ರೀಶ್ರಿಗಳವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾ ಈ ವರದಿಯನ್ನು ಶ್ರೀಗುರುಗಳ ಚರಣಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ.

ಅಧ್ಯಕ್ಷರು/ಕಾರ್ಯದರ್ಶಿ                                                                            ಮುಖ್ಯೋಪಾಧ್ಯಾಯರು        
ಆಡಳಿತ ಮಂಡಳಿ


Jan 24, 2011

ಭೂಗರ್ಭ ತಜ್ಞರಿಂದ ಉಪನ್ಯಾಸ

ಖ್ಯಾತ ಅಂತರ್ಜಲ ಸಂಶೋಧಕ, ಭೂಗರ್ಭ ತಜ್ಞ ಮಧುರಕಾನನ ಗಣಪತಿ ಭಟ್ ಮೊನ್ನೆ ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಭೂಮಿಯಲ್ಲಿರುವ ಪದರುಗಳು ಮತ್ತು ಅಂತರ್ಜಲದ ಕುರಿತಾದ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ದೂರೀಕರಿಸಿದರು.
ನಾಡಿದ್ದು 28 ರಂದು ನಮ್ಮ ಶಾಲಾ ವರ್ಧಂತ್ಯುತ್ಸವ ನಡೆಯಲಿದೆ. ನಿಮ್ಮೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ. ಬನ್ನಿ, ಇದು ನಿಮ್ಮೆಲ್ಲರಿಗೆ ನಮ್ಮ ಪ್ರೀತಿಪೂರ್ವಕ ಆಮಂತ್ರಣ.

Jan 9, 2011

ನಿನ್ನೆ ಕ್ರೀಡಾ ದಿನ...

ಹಿರಿಯ ಶಾರೀರಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಇವರ ನೇತೃತ್ವದಲ್ಲಿ ನಿನ್ನೆ ನಮ್ಮ ಶಾಲೆಯ ಕ್ರೀಡಾ ದಿನಾಚರಣೆ ಜರಗಿತು. ವಿದ್ಯಾರ್ಥಿಗಳು ವಿವಿಧ ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಉಲ್ಲಾಸ ಪಡೆದುಕೊಂಡರು. ಆರಂಭದಲ್ಲಿ ಧ್ವಜಾರೋಹಣಗೈದು ಸ್ಪರ್ಧೆಗಳಿಗೆ ಚಾಲನೆ ನೀಡಿದವರು ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.