Dec 12, 2013

ಪತ್ರಿಕಾ ವರದಿ ರಚನಾ ಕಾರ್ಯಾಗಾರ

“ಶತಮಾನಗಳ ಹಿಂದೆಯೇ ಆರಂಭವಾದ ಪತ್ರಿಕಾ ಮಾಧ್ಯಮ ಈಗಲೂ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳು ಸಮಾಜದೊಳಗಿನ ಸಂವಹನ ಸೇತುವೆಯಾಗಿ ಬೆಳೆಯುತ್ತಿವೆ. ಪುಟಾಣಿಗಳಿಂದ ಆರಂಭಿಸಿ ವೃದ್ಧರ ತನಕ ಆಯಾ ವಯೋಮಾನದವರಿಗಾಗಿ ಮೀಸಲಾದ ಅಂಕಣಗಳನ್ನು ಹೊತ್ತಿರುವ ಪತ್ರಿಕೆಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಬೇರೂರುತ್ತಿವೆ. ಹೀಗೆ ಜನರಿಗೆ ಅಗತ್ಯವಾದ ವೈವಿಧ್ಯವನ್ನು ನೀಡಲು ಪತ್ರಿಕಾ ಮಾಧ್ಯಮವು ಸಹಕಾರಿಯಾಗಿದೆ. ಆದ್ದರಿಂದ ಈ ಮಾಧ್ಯಮದ ಸದುಪಯೋಗವನ್ನು ಪಡೆದುಕೊಳ್ಳಲು ಪತ್ರಿಕಾ ವರದಿಯನ್ನು ಬರೆಯುವ ಕಲೆಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎಂದು ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಅಧ್ಯಕ್ಷ, ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು 30.11.2013 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಸಿರಿಗನ್ನಡ ವೇದಿಕೆಯ ಕಾಸರಗೋಡು ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜ್ಞಾನ ಭಾರತೀ-ಪತ್ರಿಕಾ ವರದಿ ರಚನಾ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಬಂಧ ರಚನೆಯ ವೈವಿಧ್ಯಗಳ ಕುರಿತು ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಮಾಹಿತಿ ನೀಡಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ,  ಸಿರಿಗನ್ನಡ ವೇದಿಕೆಯ ಕಾಸರಗೋಡು ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶ್ವೇತಾ. ಕೆ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.

Dec 7, 2013

ಜ್ಞಾನಭಾರತೀ - 2013

“ಹದಿಹರೆಯದ ಮಕ್ಕಳು ಸಮಾಜದ ಸೊತ್ತು. ಅವುಗಳನ್ನು ಹಾಳುಗೆಡವಬಾರದು. ಬೆಳೆಯುತ್ತಿರುವ ಗಿಡವನ್ನು ಚಿವುಟಿದರೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬೆಳೆಯಬೇಕು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು." ಎಂದು ಕಾಸರಗೋಡಿನ ಖ್ಯಾತ ವೈದ್ಯೆ ಡಾ|ವಾರುಣಿ ಶ್ರೀರಾಮ್ ಅಭಿಪ್ರಾಯಪಟ್ಟರು. ಅವರು ಮೊನ್ನೆ 05.12.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಜ್ಞಾನ ಭಾರತೀ’ ಕಾರ್ಯಕ್ರಮ ಸರಣಿಯ ‘ವೈದ್ಯರೊಂದಿಗೆ ಮಾತುಕತೆ’ಯಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.