Jul 29, 2011

ಪ್ರತಿಭಾ ಭಾರತೀ

“ಬೆಳೆಯುವ ಹಂತದಲ್ಲಿ ಗುರಿಯ ಕಡೆಗೆ ಅಚಲವಾಗಿ ಸಾಗುವುದು ಮುಖ್ಯ. ಆ ನಿಟ್ಟಿನಲ್ಲಿ ಸಾಗಲು ವಿದ್ಯಾರ್ಥಿಗಳಿಗೆ ಹಲವಾರು ವೇದಿಕೆಗಳಿವೆ. ಹೊಸ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಅವಕಾಶ ಇನ್ನಷ್ಟು ವಿಶಾಲವಾಗಿ ಬೆಳೆಯುತ್ತಿದೆ. ಅವುಗಳನ್ನು ಅನುಕೂಲಕರವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು” ಎಂದು ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯಪಟ್ಟರು. ಅವರು ೨೮.೦೭.೨೦೧೧ ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ವಿದ್ಯಾರ್ಥಿನಿ ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ ಕವಿತಾ ವಂದಿಸಿದರು. ಸಂಕೇತ ಮತ್ತು ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.

Jul 21, 2011

ಡಾ| ವಾರುಣಿ ಶ್ರೀರಾಮ್ ಅವರೊಂದಿಗೆ ಮಾತುಕತೆ

ಕಾಸರಗೋಡಿನ ಖ್ಯಾತ ವೈದ್ಯೆ ಡಾ| ವಾರುಣಿ ಶ್ರೀರಾಮ್ ಇಂದು ನಮ್ಮ ವಿದ್ಯಾರ್ಥಿಗಳೊಂದಿಗೆ ‘ವೈದ್ಯರೊಂದಿಗೆ ಮಾತುಕತೆ’ ಕಾರ್ಯಕ್ರಮದ ಅಂಗವಾಗಿ ಉಪನ್ಯಾಸ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಸರಳ ಪರಿಹಾರ ನೀಡಿ ಮೆಚ್ಚುಗೆಗೆ ಪಾತ್ರರಾದರು.

ಗುರುಪೂರ್ಣಿಮಾ...

ವಿಶಿಷ್ಟವಾಗಿ ಗುರುಪೂರ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದೇವೆ. ಮೊನ್ನೆ ಜುಲೈ ೧೫ರಂದು ವಿದ್ಯಾರ್ಥಿಗಳು ಶ್ರೀ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಹಿರಿಯರ, ರಕ್ಷಕರ, ಶಿಕ್ಷಕರ ಕಾಲಿಗೆರಗಿ ನಮಸ್ಕರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ, ಆಡಳಿತ ಮಂಡಳಿ ಸದಸ್ಯರಾದ ಕೆ.ವೆಂಕಟ್ರಮಣ ಭಟ್ ಮತ್ತು ಶ್ಯಾಮರಾಜ್ ದೊಡ್ಡಮಾಣಿ ಮತ್ತಿತರರು ಉಪಸ್ಥಿತರಿದ್ದರು.

Jul 5, 2011

ಪ್ರತಿಭಾ ಭಾರತೀ ಉದ್ಘಾಟನೆ

ನಿವೃತ್ತ ಶಿಕ್ಷಕ, ಸಾಹಿತಿ, ಪುಟಾಣಿಗಳ ಪ್ರೀತಿಯ ಬಳ್ಳಮೂಲೆ ‘ಗೋವಿಂದಣ್ಣ" ನಮ್ಮ ಶಾಲೆಯ ಪ್ರತಿಭಾ ಭಾರತೀ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಮೊನ್ನೆ ಜುಲೈ ಮೊದಲ ತಾರೀಕಿನಂದು ನೆರವೇರಿಸಿದರು. ವಿದ್ಯಾರ್ಥಿಗಳ ಚಟುವಟಿಕೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಪ್ರೀತಾ.ಎಂ ಅಧ್ಯಕ್ಷತೆ ವಹಿಸಿದ್ದರು. ಅಶ್ವತಿ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶ್ವೇತಾ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.