“ಸಂಸ್ಕಾರವಂತ ವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ಭಾಗ್ಯವಂತರು. ಉಳಿದೆಡೆ ದೊರಕದ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಪರೋಪಕಾರ, ಸನ್ನಡತೆ, ಪರಸ್ಪರ ವಿಶ್ವಾಸದ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಸೂಕ್ತ ಸಂದರ್ಭದಲ್ಲಿ ಮಕ್ಕಳಿಗೆ ಬುದ್ಧಿಮಾತುಗಳನ್ನು ಹೇಳದಿದ್ದರೆ ತಾಯಿ ತಂದೆಯರು ಶತ್ರುಗಳಾಗಬಲ್ಲರು. ಆದ್ದರಿಂದ ಸಂಸ್ಕಾರಯುತ ಶಿಕ್ಷಣ ಕಾಲದ ಅಗತ್ಯವಾಗಿದೆ. ಇಲ್ಲಿ ಬೆಳಗಿದ ದೀಪ ಸರ್ವತ್ರ ಪಸರಿಸಲಿ.” ಎಂದು ಮಂಜೇಶ್ವರದ ಶ್ರೀ ಅನಂತೇಶ್ವರ ದೇವಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಮುಂಡಕಾನ ಅಭಿಪ್ರಾಯಪಟ್ಟರು. ಅವರು ಮೊನ್ನೆ 30.03.2016 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಮಾರಂಭ ’ಸ್ಪಂದನ 2016’ ಕಾರ್ಯಕ್ರಮದಲ್ಲಿ ಜ್ಞಾನದ ಸಂಕೇತವಾಗಿ ಪ್ರಜ್ವಲಿಸುತ್ತಿರುವ ದೀಪವನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡುತ್ತಿದ್ದರು.
ಶಾಲಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯಾ ಮಂಡಲ ವಿದ್ಯಾಪ್ರಧಾನರಾದ ಬಾಲಕೃಷ್ಣ ಶರ್ಮ ಅನಂತಪುರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಕೋಶಾಧಿಕಾರಿ ಕೆ.ವೆಂಕಟ್ರಮಣ ಭಟ್ ಸೂರಂಬೈಲು, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ಆಶ್ರಿತ್ ವಂದಿಸಿದರು.